Monday, May 31, 2021

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

Article by – ಟಿಎನ್ನೆಸ್, ಮಲೇಷಿಯಾ

ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ್ ಪಾರ್ಕಿನ ಮಾರ್ಗರೇಟ್ ಕೋರ್ಟಿನಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯಾ ಓಪನ್ ಮಹಿಳಾ ಸಿಂಗಲ್ಸ್ ಪಂದ್ಯಾವಳಿಯ ನಾಲ್ಕನೇ ದಿನ. ಪ್ರಬಲ ಆಟಗಾರ್ತಿಯಾದ ವಿಶ್ವದ ನಾಲ್ಕನೇ ಶ್ರೇಯಾಂಕಿತ ಅಮೆರಿಕಾದ ಸೋಫಿಯಾ ಕೆನಿನ್ ರ ಎದುರಾಳಿ ಎಸ್ಟೇನಿಯಾದ ಶ್ರೇಯಾಂಕರಹಿತ ಆಟಗಾರ್ತಿಯಾದ ಕೈಯಾ ಕೆನಡಿ. ಸಹಜವಾಗಿ ಕೆನಿನ್ ಈ ಪಂದ್ಯವನ್ನು ಸುಲಭವಾಗಿಯೇ ಗೆಲ್ಲುತ್ತಾರೆಂಬುದು ಎಲ್ಲರ 

ಲೆಕ್ಕಾಚಾರ. ಆದರೆ ಆದದ್ದೇ ಬೇರೆ. ಪಂದ್ಯ ಆರಂಭವಾಗಿ ಕೇವಲ ಒಂದು ಘಂಟೆಯ ಅವಧಿಯೂ ಕಳೆದಿರಲಿಲ್ಲ. ಕೆನಿನ್ 6-3,6-2 ರಿಂದ ಅತಿ ಹೀನಾಯಿವಾಗಿ ಸೋತು ಹೋಗಿದ್ದಳು. 2003 ರಲ್ಲಿ ಜೆನ್ನಿಫರ್ ಕ್ಯಾಪ್ರಿಯಾಟೀ ನಂತರ ದಾಖಲಾದ ಹೀನಾಯ ಸೋಲು ಇದಾಗಿತ್ತು. ಅತಿ ಪ್ರಬಲ ಕೆನಿನ್ ಅತೀ ದುರ್ಬಲ ಎದುರಾಳಿಯಾದ ಕೆನಡಿಯ ಎದುರು ಸೋತದ್ದಾದರೂ ಹೇಗೆ? ಅದೂ ಇಷ್ಟು ಹೀನಾಯವಾಗಿ? ಎಂದು ಎಲ್ಲರೂ ಆಲೋಚಿಸುತ್ತಿರುವಾಗಲೇ ಪಂದ್ಯ ಸೋತ ಕೆಲವೇ ನಿಮಿಷಗಳಲ್ಲಿ ಸ್ವತಃ ಕೆನಿನ್ ಸಂದರ್ಶನದಲ್ಲಿ ತನ್ನ ಸೋಲಿನ ಕಾರಣವನ್ನು ಹೇಳಿ ಕಣ್ಣೀರು ಹಾಕಿದ್ದಳು. ಆ ಸಂದರ್ಶನದಲ್ಲಿ ಕೆನಿನ್ ಹೇಳಿದ್ದಿಷ್ಟು : "ಅದೇನಾಯಿತೋ ಗೊತ್ತಿಲ್ಲ. ಪಂದ್ಯದ ಆರಂಭದಿಂದಲೂ ಒಂದು ರೀತಿಯ ಒತ್ತಡ ನನ್ನನ್ನು ಆವರಿಸಿಕೊಂಡುಬಿಟ್ಟಿತು. ನನ್ನ ತಲೆ ಕೆಲಸ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದಂತೆ ನನಗೆ ಫೀಲ್ ಆಗುತ್ತಿತ್ತು. ಅತೀವ ಒತ್ತಡದ ಒಳಗೆ ನಾನು ಹೇಗೆ ಆಡುತ್ತಿದ್ದೇನೆ ಎಂದು ಕೂಡ ನನಗೆ ಗೊತ್ತಾಗುತ್ತಿಲ್ಲ. ಕಣ್ಣು ಬಿಟ್ಟು ನೋಡುವಷ್ಟರಲ್ಲೇ ನಾನು ಸೋತು ಹೋಗಿದ್ದೆ" ಎಂದು ಹೇಳಿ ಕಣ್ಣೀರು ಹಾಕುತ್ತಾ ಹೊರನಡೆದಳು.

ಈ ವಿಷಯ ಈಗ್ಯಾಕೆ ಅಂತೀರಾ? ಹೇಳ್ತೀನಿ ಕೇಳಿ. ಕೋವಿಡ್ ನಿಂದಾಗಿ ವಿಶ್ವದ ಬಹುತೇಕ ಎಲ್ಲಾ ದೇಶಗಳೂ ಲಾಕ್ ಡೌನ್ ಹೇರಿಕೊಂಡು ಬೀಗ ಜಡಿದುಕೊಂಡು ಕುಳಿತಿವೆ. ಭಾರತವೂ ಇದಕ್ಕೆ ಹೊರತಲ್ಲ. ಕರ್ನಾಟಕದಲ್ಲಿ ಕೂಡ ಕೋವಿಡ್ ಮತ್ತು ಸಾವಿನ ಸಂಖ್ಯೆಗಳು ಪ್ರತಿದಿನ ದಾಖಲಾಗುತ್ತಲೇ ಇವೆ. ರಾಜ್ಯಸರ್ಕಾರ ಕೂಡ ಲಾಕ್ ಡೌನ್ ಹೇರಿ, ಹಗಲಿರುಳು ಕೋವಿಡ್ ನಿರ್ಮೂಲನೆಗೆ ಶ್ರಮಿಸುತ್ತಿದೆ. ಈ ಲಾಕ್ ಡೌನ್ ಮಧ್ಯೆ ಸಡನ್ನಾಗಿ "ವಿದ್ಯಾರ್ಥಿಗಳ ಪರೀಕ್ಷೆ" ಎಂಬ ಭೂತ ಸದ್ದುಮಾಡತೊಡಗಿದೆ. ಪರೀಕ್ಷೆ ಎಂಬುದು ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ಅತಿ ದೊಡ್ಡ ಘಟ್ಟ ಎಂಬುದರಲ್ಲಿ ಎರಡು ಮಾತಿಲ್ಲ. ಇಡೀ ಶೈಕ್ಷಣಿಕ ವರ್ಷದಲ್ಲಿ ಕಲಿತದ್ದನ್ನೆಲ್ಲಾ ಅಭ್ಯಾಸ ಮಾಡಿ, ನೆನಪಿಟ್ಟುಕೊಂಡು ಅದನ್ನೆಲ್ಲಾ ಮೂರು ಗಂಟೆಗಳ ಅವಧಿಯಲ್ಲಿ ಒರೆಗೆ ಹಚ್ಚಿ ನೋಡಬೇಕಾದ ಹಂತ. ಆ ಮೂರು ಗಂಟೆಗಳ ಅವಧಿ ಅವನ ಮುಂದಿನ ಇಡೀ ಜೀವನವನ್ನೇ ನಿರ್ಧರಿಸುತ್ತದೆ. ಆ ಮೂರು ಗಂಟೆಗಳಲ್ಲಿ ಉತ್ತರ ಪತ್ರಿಕೆ ಎಂಬ ಬಿಳಿಹಾಳೆಯ ಮೇಲೆ ಅವನು ಬರೆಯುವ ಒಂದೊಂದು ಅಕ್ಷರವೂ ಅವನು ಡಾಕ್ಟರ್, ಇಂಜಿನಿಯರ್, ವಿಜ್ಞಾನಿ, ಪೊಲೀಸ್, ಐಎಎಸ್, ಐಪಿಎಸ್ - ಮುಂದೆ ಏನಾಗಬಹುದೆಂದು ನಿರ್ಧರಿಸಿಬಿಡುತ್ತದೆ. ಅಂತಹ ಮಹತ್ತರ ಘಟ್ಟ ಆ ಮೂರು ಗಂಟೆಗಳು. 

ಸರಿ ಈಗ ಕೋವಿಡ್ ವಿಷಯಕ್ಕೆ ಬರೋಣ. ಕೋವಿಡ್ ಎಂಬ ಪದ ಸುಮಾರು ಒಂದು ವರ್ಷದಿಂದ ದಿನಕ್ಕೆ ಏನಿಲ್ಲವೆಂದರೂ ಹತ್ತು ಸಲಕ್ಕೆ ಕಡಿಮೆಯಿಲ್ಲದಂತೆ ನಮ್ಮ ಕಿವಿಗಳಿಗೆ ಕೇಳಿಸುತ್ತಲೇ ಇದೆ. ಪತ್ರಿಕೆ, ಟಿವಿ ಗಳಷ್ಟೇ ಅಲ್ಲದೆ ನಮ್ಮ ನೆರೆಹೊರೆಯವರ, ಸ್ನೇಹಿತರ ಜೊತೆ ಕೂಡ ಕೋವಿಡ್ ವಿಚಾರ ಬಿಟ್ಟು ಮಾತನಾಡಲು ಬೇರೆ ವಿಷಯವೇ ಇಲ್ಲವೆಂಬಂತಾಗಿದೆ. ಕೋವಿಡ್ ನಿಂದಾಗಿ ಪರಿಚಿತರೊಬ್ಬರ ಸಾವಿನ ಸುದ್ದಿ ಖಂಡಿತಾ ಕೇಳಿಯೇ ಇರುತ್ತೇವೆ. ನಮ್ಮ ಸ್ನೇಹಿತರೋ, ಬಂಧುಗಳೋ, ನೆರೆಹೊರೆಯವರೋ ಅಥವಾ ಊರಲ್ಲಿ ಇನ್ನಾರೋ ಕೋವಿಡ್ ನಿಂದಾಗಿ ಸತ್ತಿರುವುದನ್ನೂ ಕಂಡಿರುತ್ತೇವೆ. 

ಇಂತಹ ಸಾವು-ನೋವುಗಳನ್ನು ಅರಗಿಸಿಕೊಳ್ಳುವ ಶಕ್ತಿ, ಸಾಮರ್ಥ್ಯ ಹದಿನಾರು, ಹದಿನೆಂಟರ ಹರೆಯದ ವಿದ್ಯಾರ್ಥಿಗಳಿಗೆ ನಿಜಕ್ಕೂ ಇರುತ್ತದೆಯೇ? ದಿನಾ ಬೆಳಿಗ್ಗೆ ಕೋವಿಡ್ ನ ಸುದ್ದಿಗಳನ್ನು ಕೇಳಿ ಕೇಳಿ, ಕೋವಿಡ್ ಬಗ್ಗೆ ತಮಗೇ ತಿಳಿಯದ ರೀತಿಯ ಒಂದು ಭಯದ ವಾತಾವರಣ ವಿದ್ಯಾರ್ಥಿಗಳಲ್ಲಿ ಮನೆಮಾಡಿರಲೂ ಸಾಕು. ಮನೆಯ ಒಳಗಡೆ ಇದ್ದಷ್ಟೂ ನಾನು ಸೇಫ್. ಹೊರಗೆ ಹೋದರೆ ಮೈಯೆಲ್ಲಾ ಕಣ್ಣಾಗಿ ನಾವೆಷ್ಟೇ ಎಚ್ಚರಿಕೆಯಿಂದ ಇದ್ದರೂ ಕೂಡ ನಮಗೇ ತಿಳಿಯದಂತೆ ಕೋವಿಡ್ ಬರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂಬ ಭಯದ ವಾತಾವರಣ ಆ ಮಗುವಿನ ಮನಸ್ಸಿಗೆ ಬಂದಿರುವುದಿಲ್ಲವೇ?

ಪರೀಕ್ಷೆ ಎಂಬುದು ದೈಹಿಕ ಕ್ರಿಯೆಯಲ್ಲ. ಅದು ಹೇಳಿ ಕೇಳಿ ಒಂದು ಮಾನಸಿಕ ಕ್ರಿಯೆ. ಮನಸ್ಸನ್ನು ಸಮಸ್ಥಿತಿಯಲ್ಲಿ ಇರಿಸಿಕೊಂಡಿದ್ದರಷ್ಟೇ ಅದು ಕೆಲಸ ಮಾಡುವುದು. ಕೋವಿಡ್ ಬರಬಹುದು ಎಂಬ ಭಯ, ಆತಂಕ ವಿದ್ಯಾರ್ಥಿಯೊಬ್ಬನಲ್ಲಿ ಮನೆ ಮಾಡಿದ್ದರೆ, ಅವನ ಮೆದುಳು ಆ ಮೂರು ಗಂಟೆಗಳ ಅವಧಿಯಲ್ಲಿ ಏನನ್ನು ತಾನೇ ನೆನಪಿಸಿಕೊಳ್ಳಲು ಸಾಧ್ಯ? ಪರೀಕ್ಷೆ ನಡೆಸುವುದೇ ವಿದ್ಯಾರ್ಥಿ ಕಲಿತ ವಿದ್ಯೆಯನ್ನು ತಿಳಿಯುವ ಉದ್ದೇಶದಿಂದ. ಆದರೆ ಆತಂಕ, ಒತ್ತಡ, ಭಯದಿಂದ ಕೂಡಿರುವ ವಿದ್ಯಾರ್ಥಿಯ ಮೆದುಳು ಅಂತ ಒತ್ತಡದ ನಡುವೆ ನಿಜಕ್ಕೂ ಕೆಲಸ ಮಾಡಬಲ್ಲದೇ? ತಾನು ಓದಿದ್ದನ್ನು ನೆನಪಿಸಿಕೊಂಡು ಅದನ್ನು ಬಿಳಿಹಾಳೆಯ ಮೇಲೆ ದಾಖಲಿಸಬಹುದೇ? ಅಂತಹ ಒತ್ತಡದಲ್ಲೂ ಸಮಸ್ಥಿತಿಯಿಂದ ಕೆಲಸ ಮಾಡುವ ಸಾಮರ್ಥ್ಯ ಆ ಚಿಕ್ಕ ಮೆದುಳಿಗೆ ಇರುವುದೇ? ಒಂದು ವೇಳೆ ಸ್ವತಃ ಆ ವಿದ್ಯಾರ್ಥಿಯೇ ಕೋವಿಡ್ ಗೆ ತುತ್ತಾಗಿದ್ದರೆ ಅವನ ಮನಸ್ಥಿತಿಯಂತೂ ಇನ್ನೂ ಹೇಗಿರಬಹುದು? ತಮ್ಮ ಮಗನನ್ನು ಪರೀಕ್ಷೆ ಬರೆಯಲು ಕಳಿಸಿ, ಪೋಷಕರು ನಿಷ್ಚಿಂತೆಯಿಂದ ಮನೆಯಲ್ಲಿ ಇರಬಲ್ಲರೇ?

ಆಧುನಿಕ ವಿಜ್ಞಾನ ಹಾಗು ತಂತ್ರಜ್ಞಾನದ  ಸಹಾಯದಿಂದ ಇಂದು ಪ್ರತಿಯೊಂದು ವಿಷಯಕ್ಕೂ ಮತ್ತೊಂದು ಬದಲಿ ವ್ಯವಸ್ಥೆಯಿದೆ. ಆದರೆ ಪರೀಕ್ಷೆ ಎಂಬುದಕ್ಕೆ ಮಾತ್ರ ಒಂದು ಬದಲಿ ವ್ಯವಸ್ಥೆ ಇಲ್ಲವೆಂದರೆ ಏನಾಶ್ಚರ್ಯ? ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೂರಾರು ಕೌನ್ಸಿಲಿಂಗ್ ಗಳನ್ನು ಕೇಳಿ, ನಿರಂತರವಾಗಿ ಅದನ್ನು ಅಭ್ಯಾಸ ಮಾಡಿದಂತಹ ಸೋಫಿಯಾ ಕೆನಾನ್ ರಂತಹ ವಿಶ್ವಮಟ್ಟದ ಆಟಗಾರ್ತಿಯೇ ಒತ್ತಡವನ್ನು ನಿಭಾಯಿಸಲು ಆಗದೇ ಸೋತಿರುವಾಗ, ಕೆನಾನ್ ಗೂ ಮಿಂಚಿದ ಒತ್ತಡ ನಿಯಂತ್ರಣ ಕೌಶಲ್ಯಗಳು ಹದಿನಾರು, ಹದಿನೆಂಟರ ಮಕ್ಕಳಿಗೆ ಇರುವುದೇ? ಇಷ್ಟಕ್ಕೂ ಈಗ ನಡೆಸಲು ಹೊರಟಿರುವುದು ವಿದ್ಯಾರ್ಥಿಗಳ ಜ್ಞಾನದ ಪರೀಕ್ಷೆಯೋ ಅಥವಾ ಅವರ ಒತ್ತಡದ ಪರೀಕ್ಷೆಯೋ? ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದು ತಿಳಿದವರು ಹೇಳುತ್ತಾರೆ. ಹಾಗಾದರೆ ಓದದೇ ಇರುವ ನೂರು ಜನ ದಡ್ಡ ವಿದ್ಯಾರ್ಥಿಗಳು ಪಾಸಾದರೂ ಪರವಾಗಿಲ್ಲ, ಚನ್ನಾಗಿ ಓದಿದ ಒಬ್ಬ ವಿದ್ಯಾರ್ಥಿಯೂ ಫೇಲ್ ಆಗಬಾರದು ಎಂಬ ನೀತಿ ಇಲ್ಲಿ ಅನ್ವಯವಾಗಲಾರದೇಕೆ? ಪರೀಕ್ಷೆ ಬರೆಯುವ ನೂರಕ್ಕೆ ನೂರು ಜನ ಮಕ್ಕಳೂ ಸ್ವಲ್ಪವೂ ಒತ್ತಡಕ್ಕೆ ಒಳಗಾಗದೆ, ಸಮಸ್ಥಿತಿಯಿಂದ ಪರೀಕ್ಷೆ ಬರೆಯುದಾದರೆ ಓಕೆ. ಆದರೆ ಒಬ್ಬನೇ ಒಬ್ಬ ವಿದ್ಯಾರ್ಥಿ, ಒತ್ತಡಕ್ಕೆ ಒಳಗಾಗಿ ತಾನು ಚನ್ನಾಗಿ ಓದಿದ್ದರೂ ಕೂಡ, ತನ್ನಲ್ಲಿ ಅಗಾಧವಾದ ಜ್ಞಾನವಿದ್ದರೂ ಕೂಡ, ಒಂದು ವೇಳೆಪರೀಕ್ಷೆಯಲ್ಲಿ ಸರಿಯಾಗಿ ಬರೆಯಲಾರ ಎಂದಾದರೆ ಅವನು ಪಾಸಾದಂತೆಯೋ? ನಪಾಸಾದಂತೆಯೋ? ಅವನು ಮುಂದಿನ ವಿದ್ಯಾಭ್ಯಾಸಕ್ಕೆ ಅರ್ಹನೋ ಅಥವಾ ಅಲ್ಲವೋ? ಉತ್ತರಿಸುವವರಾರು?

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...