Sunday, May 30, 2021

ಮುಜುಗರ



ದುರ್ಯೋಧನ ಜೊತೆ ಸಂಧಾನ ಮಾಡಿಕೊಂಡು ಯುದ್ಧವನ್ನು ನಿಲ್ಲಿಸಿ, ಶಾಂತಿ ಸ್ಥಾಪನೆ ಉದ್ದೇಶದಿಂದ ಕೃಷ್ಣ ಹಸ್ತಿನಾಪುರಕ್ಕೆ ಬರುತ್ತಾನೆ. ಕೃಷ್ಣ ಬಂದಾಗ ಆಗಲೇ ಮುಸ್ಸಂಜೆಯ ಸಮಯ. ಕೃಷ್ಣನನ್ನು ಸ್ವಾಗತಿಸಲು, ದುರ್ಯೋಧನ ಇಡೀ ನಗರವನ್ನು ಸಿಂಗರಿಸಿ, ಸ್ವಾಗತಕಾರರನ್ನು ನೇಮಿಸಿ, ಕೃಷ್ಣನನ್ನು ಕರೆತರಲು ಅಲಂಕೃತಗೊಂಡ ರಥವನ್ನು ಕಳಿಸಿರುತ್ತಾನೆ. ಆದರೆ ಅವರೆಲ್ಲರ ಕಣ್ಣುತಪ್ಪಿಸಿ ಚಿಕ್ಕದಾದ ಕಾಲುದಾರಿಯಲ್ಲಿ ನಡೆದುಕೊಂಡು ಕೃಷ್ಣ ದುರ್ಯೋಧನನ ಆಸ್ಥಾನಕ್ಕೆ ಬರುತ್ತಾನೆ. "ಇದೇನು ಕೃಷ್ಣ? ನಿನಗಾಗಿ ನಾನು ಸ್ವಾಗತ ಮಾಡುತ್ತಿದ್ದರೆ, ನೀನು ಬೇರೆ ಕಡೆಯಿಂದ ಬಂದಿರುವೆ? ಸರಿ ಬಿಡು, ಆದದ್ದಾಯಿತು. ಈಗಾಗಲೇ ಸಂಜೆಯಾಗಿದೆ. ಇಂದು ರಾತ್ರಿ ನಿನಗೆ ಅರಮನೆಯಲ್ಲಿಯೇ ಊಟೋಪಚಾರ ಹಾಗೂ ಮಲಗಲು ವಿಶೇಷ ವ್ಯವಸ್ಥೆಯನ್ನು ಮಾಡಿಸಿದ್ದೇನೆ. ಇಂದು ನನ್ನ ಅರಮನೆಯಲ್ಲಿ ವಿಶ್ರಾಂತಿ ತೆಗೆದುಕೊಂಡು ನಾಳೆ ಸಭೆಯಲ್ಲಿ ಮಾತನಾಡೋಣ" ಎಂದು ದುರ್ಯೋಧನ ಕೃಷ್ಣನಿಗೆ ಹೇಳುತ್ತಾನೆ.

ಅದನ್ನು ಕೇಳಿದ ಕೃಷ್ಣ ಒಮ್ಮೆ ನಸುನಕ್ಕು ದುರ್ಯೋಧನನಿಗೆ ಹೇಳುತ್ತಾನೆ : "ನಾನೀಗ ಪಾಂಡವರ ರಾಯಭಾರಿಯಾಗಿ ಬಂದಿದ್ದೇನೆ ಒಂದು ವೇಳೆ ನಿನ್ನನ್ನುಆತಿಥ್ಯವನ್ನು ಸ್ವೀಕರಿಸಿದರೆ ಅದು ಲಂಚ ತೆಗೆದುಕೊಂಡಂತೆ. ಹಾಗಾಗಿ ನಾನು ಕಳ್ಳದಾರಿಯಲ್ಲಿ ಬಂದೆ."  ಕೃಷ್ಣನ ಈ ಮಾತಿಗೆ ಏನು ಹೇಳಬೇಕೋ ತಿಳಿಯದಾದ ದುರ್ಯೋಧನ ಕೊಂಚ ಸಾವರಿಸಿಕೊಂಡು ಹೇಳುತ್ತಾನೆ: "ನಾವಿಬ್ಬರು ಸಂಬಂಧಿಕರಲ್ಲವೇ ಕೃಷ್ಣ? ನನ್ನ ಮಗಳನ್ನು ನಿನ್ನ ಮಗ ಸಾಂಬ ಮದುವೆಯಾಗಿದ್ದಾನಲ್ಲವೇ? ಅಂದರೆ ನಾವಿಬ್ಬರೂ ಸಂಬಂಧದಲ್ಲಿ ಬೀಗರು ಎಂದಾಯಿತು. ಬೀಗರ ಆತಿಥ್ಯ ಸ್ವೀಕರಿಸುವುದು ತಪ್ಪಿಲ್ಲಾ ಅಲ್ಲವಾ?"

ಅದಕ್ಕೆ ಕೃಷ್ಣ ನಗುತ್ತಾ ಉತ್ತರಿಸುತ್ತಾನೆ : "ನಾನು ನಿನ್ನ ಮನೆಗೆ ಊಟಕ್ಕೆ ಬರಲಾರೆ ದುರ್ಯೋಧನ. ಅದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ನಾನೀಗ ಪಾಂಡವರ ರಾಯಭಾರಿಯಾಗಿ ಬಂದಿದ್ದೇನೆಯೇ ವಿನಃ ನಿನ್ನ ಬೀಗನಾಗಿ ಅಲ್ಲ. ಹಾಗಾಗಿ ನಿನ್ನ ಆತಿಥ್ಯ ಸ್ವೀಕರಿಸಲಾರೆ. ಎರಡನೆಯದಾಗಿ, ನಾವು ಬೇರೆಯವರ ಮನೆಗೆ ಊಟಕ್ಕೆ ಹೋಗಬೇಕಾದರೆ ಎರಡು ಕಾರಣ ಇರುತ್ತದೆ. ಒಂದೋ ನಮ್ಮ ಮನೆಯಲ್ಲಿ ಊಟಕ್ಕೆ ಗತಿ ಇಲ್ಲದೆ ಇರಬೇಕು ಅಥವಾ ಬೇರೆಯವರು ಪ್ರೀತಿಯಿಂದ ಅವರ ಮನೆಗೆ ಊಟಕ್ಕೆ ಆಹ್ವಾನಿಸಿರಬೇಕು. ಆದರೆ ಈಗ ನಾನು ಊಟಕ್ಕೆ ಗತಿಯಿಲ್ಲದೆಯೂ ಇಲ್ಲಿಗೆ ಬಂದಿಲ್ಲ; ನೀನು ಪ್ರೀತಿಯಿಂದಲೂ ನನ್ನನ್ನು ಆಹ್ವಾನಿಸಿಲ್ಲ. ಹಾಗಾಗಿ ನಿನ್ನ ಮನೆಯ ಅನ್ನವನ್ನು ನಾನು ಸ್ವೀಕರಿಸಲಾರೆ" ಎಂದು ಖಡಾಖಂಡಿತವಾಗಿ ನುಡಿದುಬಿಟ್ಟ. ದುರ್ಯೋಧನನ ಮನೆಗೆ ಹೋಗಲಿಲ್ಲವೆಂದು ಕೃಷ್ಣ ನೇರವಾಗಿ ಹೇಳಿದ ಮೇಲೆ, ಭೀಷ್ಮಾಚಾರ್ಯರು ತಮ್ಮ ಮನೆಗೆ ಕೃಷ್ಣನನ್ನು ಆಹ್ವಾನಿಸುತ್ತಾರೆ. ಭೀಷ್ಮರು ಕೃಷ್ಣನಿಗೆ ಅಗ್ರಪೂಜೆ ಮಾಡಿಸಿದಂತಹವರು. ಹೀಗಾಗಿ ಕೃಷ್ಣ ನಮ್ಮ ಮನೆಗೆ ಖಂಡಿತ ಬರುತ್ತಾನೆ ಎಂಬ ನಂಬಿಕೆ ಭೀಷ್ಮಆಚಾರ್ಯರಿಗೆ. ಆದರೆ ಕೃಷ್ಣಭೀಷ್ಮರ ಕಡೆಗೆ ತಿರುಗಿ "ದ್ರೌಪದಿಯ ವಸ್ತ್ರಾಪಹರಣ ನಡೆಯುವಾಗ ನೀವು ನೋಡಿಯೂ ಕೂಡ ಸುಮ್ಮನಿದ್ದಿರಿ. ಒಂದು ಹೆಣ್ಣಿಗೆ ಗೌರವ ಕೊಡದ ನಿಮ್ಮ ಮನೆಗೆ ನಾನು ಬರಲಾರೆ" ಎಂದು ನಿಷ್ಠುರವಾಗಿ ನುಡಿದು ನೇರವಾಗಿ ವಿದುರನ ಮನೆಗೆ ಹೋಗುತ್ತಾನೆ.

ಕೃಷ್ಣನ ಈ ಗುಣದಿಂದ ನಾವು ಕಲಿಯಬೇಕಾದದ್ದು ಬಹಳ ಇದೆ. ಕೆಲವೊಮ್ಮೆ ಮುಜುಗರಕ್ಕೀಡಾಗಿಯೋ ಅಥವಾ ಯಾರು ಏನೆಂದುಕೊಳ್ಳುವರೋ ಎಂದು ನಾವು ಕೆಲವು ಬಾರಿ ನಮಗೆ ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳಿಗೆ NO ಎಂದು ಹೇಳುವ ಧೈರ್ಯವಿಲ್ಲದೇ YES ಎಂದು ಹೇಳಿಬಿಡುತ್ತೇವೆ. ಆಮೇಲೆ ನಾವೇ ಕಷ್ಟಗಳನ್ನು ಮೈಮೇಲೆ ಎಳೆದುಕೊಂಡು ಅನುಭವಿಸುತ್ತೇವೆ. ಕೆಲಸ-ಸಮಯ-ಸಂದರ್ಭ ಎಂತಹದೇ ಇರಲಿ, ನಮಗೆ ಅಧರ್ಮ, ಅನ್ಯಾಯ ಅನಿಸಿದ್ದಕ್ಕೆ ನೇರವಾಗಿ NO ಎಂದು ಹೇಳುವುದನ್ನು ನಾವು ಕಲಿಯಲೇಬೇಕು. ನ್ಯಾಯಯುತವಾದ ಕೆಲಸಕ್ಕೆ ಮಾತ್ರ ನಾವು YES ಅನ್ನಬೇಕು. ಮೇಲಧಿಕಾರಿಗಳ ಒತ್ತಡಕ್ಕೋ, ಮರ್ಜಿಗೋ ಮಣಿದು, ತಪ್ಪು ಎಂದು ತಿಳಿದಿದ್ದರೂ ಕೂಡ ಕೆಲವು ಬಾರಿ ಪ್ರಾಜೆಕ್ಟ್ ಗಳಿಗೆ ಅಥವಾ ಫೈಲುಗಳಿಗೆ ಸಹಿ ಹಾಕಿ ಆಮೇಲೆ ತೊಂದರೆಗೆ ಒಳಗಾಗುವವರ ಬಗ್ಗೆ ನಾವು ನೋಡಿಯೇ ಇರ್ತೀವಿ. ಕೇಳಿಯೇ ಇರ್ತೀವಿ. ಕೇವಲ ವೃತ್ತಿಯಲ್ಲಿ ಮಾತ್ರವೇ ಅಲ್ಲ, ಪರ್ಸನಲ್ ಜೀವನದಲ್ಲಿ ಕೂಡ ಯಾರದೋ ಒತ್ತಡಕ್ಕೆ ಮಣಿದು ಏನೆಂದುಕೊಳ್ಳುತ್ತಾರೋ ಎಂದು ನಮಗೆ ಸಂಬಂಧವಿಲ್ಲದ ಬ್ಯಾಂಕ್ ಲೋನುಗಳಿಗೆ ಕೂಡ ಕೆಲವೊಮ್ಮೆ ಶೂರಿಟಿ ಹಾಕುತ್ತೇವೆ. ಆಮೇಲೆ ನಾವೇ ಅನುಭವಿಸುತ್ತೇವೆ. ಅದರ ಬದಲು ನಮ್ಮ ಕೈಲಿ ಸಾಧ್ಯವಾಗದ್ದಕ್ಕೆ ಅಥವಾ ನಮಗೆ ಇಷ್ಟವಾಗದ್ದಕ್ಕೆ NO ಎಂದು ನಿಷ್ಠುರವಾಗಿ ಹೇಳಿದರೆ ನಮ್ಮ ಪರ್ಸನಲ್ ಹಾಗೂ ಪ್ರೊಫೆಷನಲ್ ಲೈಫ್ ಎರಡೂ ಕೂಡ ಹ್ಯಾಪಿಯಾಗಿರುತ್ತೆ ಅಲ್ಲವೇ?


No comments:

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...