Sunday, May 30, 2021

ಹೊಗಳಿಕೆ-ತೆಗಳಿಕೆ

 


ಮಹಾಭಾರತ ಯುದ್ಧ ನಡೆಯುತ್ತಲೇ ಇದೆ. ಕೌರವರ ಪರಾಕ್ರಮ ದಿನೇ ದಿನೇ ಹೆಚ್ಚುತ್ತಲೇ ಇದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಪಾಂಡವರ ಕಡೆಯ ಸೈನಿಕರು ತರಗೆಲೆಗಳಂತೆ ನೆಲಕ್ಕುರುಳುತ್ತವೆ ಇದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಯುದ್ಧದಲ್ಲಿ ಕೌರವರ ಕೈ ಮೇಲಾಗುತ್ತಿದೆ; ಪಾಂಡವರು ನಿಧಾನವಾಗಿ ಸೋಲಿನ ಕಡೆಗೆ ಸಾಗುತ್ತಿದ್ದಾರೆ. ಏನೇ ಪ್ರಯತ್ನ ಮಾಡಿದರೂ ಕರ್ಣನನ್ನು ಸಾಯಿಸಲು ಅರ್ಜುನನಿಗೆ ಸಾಧ್ಯವಾಗುತ್ತಲೇ ಇಲ್ಲ. ಹೀಗಿರಲು ಒಂದು ದಿನ ಸಂಜೆ ಯುದ್ಧ ಮುಗಿದು ಪಾಂಡವರೆಲ್ಲ ತಮ್ಮ ತಮ್ಮ ಮನೆಗಳಿಗೆ ವಿಶ್ರಾಂತಿಗೆ ತೆರಳಿದರು. ಅರ್ಜುನ ಬಂದು ಗಾಂಡೀವವನ್ನು ಕೆಳಗಿಳಿಸಿ ಕವಚಗಳನ್ನು ತೆಗೆದು ಮೈಮೇಲಾಗಿದ್ದ ಗಾಯಗಳಿಗೆ ಔಷಧಿ ಹಚ್ಚಿಕೊಳ್ಳುತ್ತಾ ನಿಂತಿದ್ದ. ನೇರ ಅರ್ಜುನನ ಬಳಿಬಂದ ಧರ್ಮರಾಯ ಅರ್ಜುನನನ್ನು ನಿಂದಿಸತೊಡಗಿದ: "ಅದೇನೆಂದು ಗಾಂಡೀವವನ್ನು ಹಿಡಿದುಕೊಂಡಿದ್ದೀಯ ನೀನು? ಒಬ್ಬ ಕರ್ಣನನ್ನು ಸಾಯಿಸಲು ನಿನ್ನಿಂದ ಆಗುತ್ತಿಲ್ಲ. ನಿನಗೆ ನಾಚಿಕೆಯಾಗಬೇಕು. ಗಾಂಡೀವಿ ಎಂಬ ಬಿರುದು ಬೇರೆ ನಿನಗೆ" ಎಂದು ಒಂದೇ ಸಮನೆ ಅರ್ಜುನನನ್ನು ನಿಂದಿಸಲು ಪ್ರಾರಂಭಿಸಿದ. ಈಗಾಗಲೇ ಯುದ್ಧರಂಗದಲ್ಲಿ ಬಸವಳಿದಿದ್ದ ಅರ್ಜುನ ತನ್ನ ಅಣ್ಣನ ಮಾತನ್ನು ಕೇಳಿ ಇನ್ನಷ್ಟು ಕೋಪೋದ್ರಿಕ್ತನಾದ. ಕರ್ಣನ ಮೇಲಿನ FRUSTRATION ಎಲ್ಲವನ್ನೂ ಧರ್ಮರಾಯನ ಮೇಲೆ ತೋರಿಸಲು ಪ್ರಾರಂಭಿಸಿದ. ಯಾರಾದರೂ ಅವನ ಗಾಂಡೀವವನ್ನು ಕೆಟ್ಟದಾಗಿ ಬೈದರೆ ಅವರ ತಲೆ ತೆಗೆಯುತ್ತೇನೆ ಎಂದು ಅರ್ಜುನ ಒಮ್ಮೆ ಶಪಥ ಮಾಡಿದ್ದನಂತೆ.

 ಧರ್ಮರಾಯನ ಮಾತನ್ನು ಕೇಳಿ ಅರ್ಜುನನಿಗೆ ಎಲ್ಲಿಲ್ಲದ ಸಿಟ್ಟು ಬಂತು. "ನನ್ನ ಗಾಂಡೀವವನ್ನು ಯಾರಾದರೂ ಬೈದರೆ ಅವರ ತಲೆ ತೆಗೆಯುತ್ತೇನೆ ಎಂದು ನಾನು ಶಪಥ ಮಾಡಿದ್ದೆ. ಈ ಕೂಡಲೇ ನಿನ್ನನ್ನು ಸಾಯಿಸಿಬಿಡುತ್ತೇನೆ ನೋಡು" ಎಂದು ಖಡ್ಗ ಹಿಡಿದು ಧರ್ಮರಾಯನತ್ತ ನುಗ್ಗಿದ. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಕೃಷ್ಣ ತಕ್ಷಣ ಬಂದು ಅವರ ಜಗಳವನ್ನು ಬಿಡಿಸಿ ಅರ್ಜುನನಿಗೆ ಹೇಳಿದ "ನಿಮ್ಮ ಅಣ್ಣನನ್ನು ನೀನು ಸಾಯಿಸಬೇಕು ತಾನೇ? ಅದಕ್ಕೆ ಖಡ್ಗವೇ ಬೇಕಿಲ್ಲ, ಇನ್ನೊಂದು ದಾರಿಯಿದೆ. ಹೇಳುತ್ತೇನೆ ಕೇಳು. ನಿಮ್ಮಣ್ಣನನ್ನು ಚೆನ್ನಾಗಿ ನಿಂದಿಸಿಬಿಡು. ಮನಸಾರೆ ಬಯ್ದುಬಿಡು. ನಮಗಿಂತ ದೊಡ್ಡವರನ್ನು ನಾವು ಕೆಟ್ಟದಾಗಿ ಬೈದರೆ ಅದು ಅವರನ್ನು ಕೊಂದಂತೆಯೇ ಲೆಕ್ಕ" ಎಂದನಂತೆ. ಕೃಷ್ಣನ ಮಾತು ಕೇಳಿದ ಅರ್ಜುನ ತನ್ನ ಅಣ್ಣ ಧರ್ಮರಾಯನನ್ನು ಕೆಟ್ಟದಾಗಿ ಬಯ್ಯಲು ಆರಂಭಿಸಿದ. "ನಿನಗೇನು ಗೊತ್ತು? ಹೇಡಿಯಂತೆ ಮನೆಯಲ್ಲಿ ಬೆಚ್ಚಗೆ ಕುಳಿತು ಮಾತನಾಡುವುದಲ್ಲ. ತಾಕತ್ತಿದ್ದರೆ ಯುದ್ಧಭೂಮಿಗೆ ಬಂದು ಹೋರಾಡು. ಆಗ ನಿನಗೆ ತಿಳಿಯುತ್ತದೆ ಅದರ ಕಷ್ಟ" ಎಂದು ಮನಸೋಇಚ್ಛೆ ಧರ್ಮರಾಯನನ್ನು ನಿಂದಿಸಿದ. ಸ್ವಲ್ಪ ಕೋಪ ಕಡಿಮೆಯಾಗುತ್ತಿದ್ದಂತೆ ಅರ್ಜುನನಿಗೆ ಮತ್ತೆ ಜೋರಾಗಿ ಅಳು ಬಂತು

“ಅಯ್ಯೋ! ದೇವರಂತಹ ನಮ್ಮಣ್ಣನನ್ನು ಕೋಪದಲ್ಲಿ ಕೆಟ್ಟದಾಗಿ ನಾನು ಬೈದುಬಿಟ್ಟೆನಲ್ಲಾ? ನಾನಿನ್ನು ಬದುಕಿರಬಾರದು. ನಾನೇ ಸಾಯುತ್ತೇನೆ!” ಎಂದು ಮತ್ತೊಮ್ಮೆ ಖಡ್ಗವನ್ನು ತೆಗೆದು ತನ್ನ ಕತ್ತನ್ನೇ ಕಡಿದುಕೊಳ್ಳಲು ಹೊರಟ. ಇದನ್ನು ನೋಡಿದ ಕೃಷ್ಣ "ಇದೊಳ್ಳೆ ಕಥೆ ಆಯ್ತಲ್ಲ" ಎಂದು ಮತ್ತೆ ಓಡಿಬಂದು "ಏನಾಯ್ತು ಅರ್ಜುನ?" ಎಂದಾಗ "ದೇವರಂತಹ ನಮ್ಮ ಅಣ್ಣನನ್ನು ನಾನು ನಿಂದಿಸಿಬಿಟ್ಟೆ. ನಾನಿನ್ನು ಬದುಕಿರಬಾರದು; ಸಾಯುತ್ತೇನೆ" ಎಂದ ಅರ್ಜುನನನ್ನು ತಡೆದು ಕೃಷ್ಣ ಹೇಳಿದ: "ಸರಿ ಈಗ ನೀನು ಸಾಯಬೇಕು ಅಷ್ಟೇ ತಾನೇ? ಅದಕ್ಕೂ ಒಂದು ವಿಧಾನ ಇದೆ. ದೊಡ್ಡವರ ಮುಂದೆ ನಮ್ಮನ್ನು ನಾವು ಹೊಗಳಿಕೊಳ್ಳಬೇಕು. ನಿಮಗಿಂತ ನಾನೇ ಪರಾಕ್ರಮಿ. ನಿಮಗಿಂತ ನಾನೇ ಶ್ರೇಷ್ಠ. ನಿಮಗಿಂತ ನಾನೇ ಬುದ್ದಿವಂತ. ನನ್ನ ಮುಂದೆ ನೀವು ಏನೇನೂ ಇಲ್ಲ" ಎಂದು ಹಿರಿಯರನ್ನು ಕೀಳಾಗಿ ನಿಂದಿಸಿ ಅವರ ಮುಂದೆ ನಮ್ಮನ್ನು ನಾವು ಹೊಗಳಿಕೊಳ್ಳಬೇಕು ಆಗ ನಾವು ಅವರ ಎದುರು ಬದುಕಿದ್ದರೂ ಸತ್ತಂತೆಯೇ" ಅಂದನಂತೆ.

ಕೃಷ್ಣನ ಈ ಮಾತು ಇಂದಿನ ಕಾರ್ಪೋರೇಟ್ ಜಗತ್ತಿನಲ್ಲಿ ಪ್ರತಿಕ್ಷಣವೂ ನೆನಪಿಡಬೇಕಾದ ಸತ್ಯ. ನಾನು ತುಂಬಾ ದೊಡ್ಡ ಪೋಸಿಶನ್ ನಲ್ಲಿ ಇದ್ದೇನೆ. ನನ್ನನ್ನು ಕೆಲಸದಿಂದ ತೆಗೆದುಹಾಕಿದರೆ ಕಂಪನಿಯೇ ನಡೆಯುವುದಿಲ್ಲ. ನಾನೇ ಕಂಪನಿ; ಕಂಪನಿಯೇ ನಾನು ಎಂಬಂತಹ ದುರ್ವರ್ತನೆ ನಮ್ಮಲ್ಲಿ ಕೆಲವೊಮ್ಮೆ ಬರುತ್ತದೆ. ಆ ಸಂದರ್ಭದಲ್ಲಿ ನಾವು ಈ ಕಥೆಯನ್ನು ನೆನಪಿಟ್ಟುಕೊಳ್ಳಬೇಕು. ನನಗೆ ಮುಂಚೆಯೂ ಕಂಪನಿ ಇತ್ತು. ನನ್ನ ನಂತರವೂ ಇರುತ್ತದೆ. "ಎನಗಿಂತ ಕಿರಿಯರಿಲ್ಲ ನಿಮಗಿಂತ ಹಿರಿಯರಿಲ್ಲ" ಎಂಬ ದಾಸವಾಣಿಯಂತೆ ನಮ್ಮನ್ನು ನಾವು ಹೊಗಳಿಕೊಂಡಷ್ಟೂ ನಮಗೇನೇ ತೊಂದರೆ. ಬೇರೆಯವರ ಮಾತಿಗೂ ಬೆಲೆ ಕೊಡುವುದು, ಮಾತನಾಡುವಾಗ 'ಪ್ಲೀಸ್', 'ಥ್ಯಾಂಕ್ಸ್' ಮತ್ತು 'ಸಾರಿ' ಎಂಬ ಪದಗಳನ್ನು ಬಳಸಿದಷ್ಟೂ ನಮ್ಮ ಮೇಲೆ ಅವರಿಗೆ ಇರುವ ಗೌರವ ಇಮ್ಮಡಿಯಾಗುತ್ತದೆ. ಪ್ರೊಫೆಷನಲ್ ಲೈಫ್ ಆದರೂ ಸರಿ, ಪರ್ಸನಲ್ ಲೈಫ್ ಆದರೂ ಸರಿ. ಈ ಕೃಷ್ಣ ತತ್ವ ಎಲ್ಲ ಕಡೆಗೂ ಅಪ್ಲೈ ಆಗುತ್ತೆ.


No comments:

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...