Sunday, May 30, 2021

ರಾಜನೀತಿ



ಹೇಗಾದರೂ ಸರಿ ಅಣ್ಣ ಶ್ರೀರಾಮನಿಂದ ರಾಜನೀತಿಯನ್ನು ಕಲಿಯಲೇಬೇಕೆಂಬ ಹಂಬಲ ಲಕ್ಷ್ಮಣನಿಗೆ ಚಿಕ್ಕಂದಿನಿಂದಲೂ ಕಾಡುತ್ತಲೇ ಇತ್ತು. ತನ್ನ ಅಣ್ಣನಲ್ಲಿ ಅವನು ಅದೆಷ್ಟೋ  ಬಾರಿ ಈ ವಿಷಯವನ್ನು ಕೇಳಿದ್ದ ಕೂಡ. ಆದರೆ ಪ್ರತಿಬಾರಿಯೂ ಶ್ರೀರಾಮನು ಒಂದಲ್ಲ ಒಂದು ಸಬೂಬು ಹೇಳುತ್ತಾ, ಇಂದು-ನಾಳೆ-ನಾಡಿದ್ದು ಎಂದು ಸಮಯ ತಳ್ಳುತ್ತಲೇ ಬರುತ್ತಿದ್ದ. ಹೀಗಿರಲು ರಾಮ ಸೀತ ಲಕ್ಷ್ಮಣರ ವನವಾಸ, ಸೀತೆಯ ಅಪಹರಣ, ಹನುಮಂತನಿಂದ ಲಂಕೆಯಲ್ಲಿ ಸೀತಾ ಶೋಧ, ಲಂಕೆಗೆ ಸೇತುವೆ ನಿರ್ಮಾಣ,  ರಾವಣ ಕುಂಭಕರ್ಣರ  ಜೊತೆ ಯುದ್ಧ ಎಲ್ಲವೂ ಮುಗಿದು ಹೋಗಿತ್ತು. ಆ ಯುದ್ಧದಲ್ಲಿ ಕುಂಭಕರ್ಣನ ವಧೆಯೂ ಆಯಿತು. ಯುದ್ಧದ ಕೊನೆಯ ದಿನ ರಾಮ-ರಾವಣರ ಕಾಳಗದಲ್ಲಿ ರಾಮನ ಬಾಣದ ಪೆಟ್ಟಿಗೆ ರಾವಣ ಕೆಳಗೆ ಬಿದ್ದ. ಇನ್ನೇನು ಕೆಲವೇ ಕ್ಷಣಗಳಲ್ಲಿ ರಾವಣನ ಪ್ರಾಣಿ ಪಕ್ಷಿ ಹಾರಿಹೋಗಲಿತ್ತು. ಆ ಸಮಯದಲ್ಲಿ ಲಕ್ಷ್ಮಣನನ್ನು ಬಳಿಗೆ ಕರೆದು "ಹೋಗು ರಾಜನೀತಿಯನ್ನು ಕಲಿಸುವಂತೆ ರಾವಣನನ್ನು ಕೇಳು. ಅವನು ಮಹಾ ಬ್ರಾಹ್ಮಣ. ಖಂಡಿತ ನಿನಗೆ ಕಲಿಸುತ್ತಾನೆ" ಎಂದು ಶ್ರೀರಾಮ ಹೇಳಿದನಂತೆ. ಆ ಮಾತಿಗೆ ಲಕ್ಷ್ಮಣನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಮಹಾಸಾಧ್ವಿ ಸೀತೆಯನ್ನು ಅಪಹರಿಸಿದ ರಾವಣ ನಮ್ಮ ಶತ್ರು. ನಮ್ಮ ಅಣ್ಣನೇ ಸ್ವತಃ ಅವನನ್ನು ಬಾಣದಿಂದ ಹೊಡೆದಿದ್ದಾನೆ. ಹಾಗಿದ್ದೂ  ಕೂಡ  ಶತ್ರುವಿನಿಂದ ರಾಜನೀತಿ ಕಲಿಯಲು ಹೇಳುತ್ತಿದ್ದಾನೆ. ಹೋಗಿ ಹೋಗಿ ಶತ್ರುವನ್ನು ಗುರು ಎಂದು ಭಾವಿಸುವುದಾದರೂ ಹೇಗೆ? ಅವನ ಪಾದ ಮುಟ್ಟಿ ನಮಸ್ಕಾರ ಮಾಡುವುದಾದರೂ ಹೇಗೆ? ಅಥವಾ ಅಣ್ಣನೇನಾದರೂ ನನ್ನೊಡನೆ ತಮಾಷೆ ಮಾಡುತ್ತಿರಬಹುದೇ?  ಎಂದು ಏನೂ ತಿಳಿಯದವನಂತೆ ಲಕ್ಷ್ಮಣ ಕಕ್ಕಾಬಿಕ್ಕಿಯಾಗಿ ನಿಂತಿದ್ದನು. ಲಕ್ಷ್ಮಣನ  ಮನಸ್ಸನ್ನು ಅರಿತ ಶ್ರೀರಾಮ ಹೇಳಿದನಂತೆ: "ಲಕ್ಷ್ಮಣ! ನಿನ್ನ ಭಾವನೆ ಏನೆಂದು ನನಗೆ ತಿಳಿಯಿತು. ಸೀತೆಯನ್ನು ಅಪಹರಿಸಿದ್ದು ರಾವಣನ ತಪ್ಪು. ಆ ತಪ್ಪಿಗೆ ಅವನಿಗೆ ಶಿಕ್ಷೆಯಾಯಿತು. ಈಗಾಗಲೇ ಅವನು ಸಾವಿನ ಮನೆಗೆ ಪಯಣಿಸುತ್ತಿದ್ದಾನೆ. ಹೀಗಾಗಿ ಅವನ ಜೊತೆ ನಮ್ಮ ಶತ್ರುತ್ವ ಮುಗೀತು. ನಮ್ಮ ಶತ್ರುತ್ವ ಮುಗಿದಮೇಲೆ ಅವನು ನಮ್ಮ ಮಿತ್ರನಲ್ಲವೇ? ಹಾಗಾಗಿ ಹೋಗಿ ರಾವಣನಲ್ಲಿ ಕೇಳು ಖಂಡಿತ ರಾಜನೀತಿಯನ್ನು ಹೇಳಿಯಾನು".

ಅಣ್ಣನ ಮಾತಿಗೆ ಬೆಲೆಕೊಟ್ಟು, ಲಕ್ಷ್ಮಣನು ರಾವಣನ ಮುಂದೆ ಬಂದು ನಿಂತು, ಪಾದ ಮುಟ್ಟಿ ನಮಸ್ಕರಿಸಿ, ರಾಜನೀತಿಯನ್ನು ಹೇಳಿಕೊಡುವಂತೆ ಕೇಳುತ್ತಾನೆ. ಆಗ ರಾವಣ ಹೇಳಿದ್ದು ಇಷ್ಟೇ : “ರಾಜನೀತಿ ಅನ್ನೋದು ತುಂಬಾ ಸಿಂಪಲ್ ಲಕ್ಷ್ಮಣಾ. ಒಳ್ಳೆಯ ಕೆಲಸವನ್ನು ಆದಷ್ಟೂ ಬೇಗನೆ ಮಾಡಿ ಮುಗಿಸು. ಕೆಟ್ಟ ಕೆಲಸವನ್ನು ಆದಷ್ಟೂ ಮುಂದೂಡು.ಈ ಎರಡೂ ತತ್ವಗಳನ್ನೂ ನಾನು ಪಾಲಿಸಲಿಲ್ಲ. ಆದ್ದರಿಂದಲೇ ಇಂದು ಈ ಸ್ಥಿತಿಯಲ್ಲಿ ಇದ್ದೇನೆ. ಒಂದು ವೇಳೆ ಈ ಎರಡನ್ನೂ ಪಾಲಿಸಿದ್ದೇ ಆಗಿದ್ದಿದ್ದರೆ ನಾನು ಇಂದಿಗೂ ಲಂಕಾಧಿಪತಿ ಯಾಗಿಯೇ ಇರುತ್ತಿದ್ದೆ. ಇಂದ್ರನನ್ನು ಜಯಿಸಿ ನಾನು ಅಮೃತವನ್ನು ತಂದಿದ್ದೆ. ಆದರೆ ಅದನ್ನು ಸೇವಿಸಲು ಒಳ್ಳೆಯ ಮುಹೂರ್ತವಿಲ್ಲವೆಂದು ಮುಂದೂಡುತ್ತಲೇ ಬಂದೆ. ಅದು ನಾನು ಮಾಡಬೇಕಾಗಿದ್ದ ಒಳ್ಳೆಯ ಕೆಲಸವಾಗಿತ್ತು. ಆದರೆ ಅದನ್ನು ವೃಥಾ ಮುಂದೂಡಿದೆ. ಇನ್ನು ಸೀತಾ ಅಪಹರಣ ಕೆಟ್ಟ ಕೆಲಸ. ಅದನ್ನು ಆದಷ್ಟೂ ನಿಧಾನ ಮಾಡಬೇಕಿತ್ತು. ಆದರೆ ಆ ಕೆಟ್ಟ ಕೆಲಸವನ್ನು ಬೇಗ ಮಾಡಿದೆ. ಇಷ್ಟೇ ರಾಜನೀತಿ" ಎಂದು ಮಾತನಾಡುತ್ತಲೇ ರಾವಣನ ಪ್ರಾಣಪಕ್ಷಿ ಹಾರಿಹೋಗಿತ್ತು.

ಈ ಕತೆಯಲ್ಲಿ ಎರಡು ಅದ್ಭುತವಾದ ಮ್ಯಾನೇಜ್ಮೆಂಟ್ ಸ್ಕಿಲ್ ಗಳು ಅಡಗಿವೆ.

ಮೊದಲನೆಯದಾಗಿ ನಮ್ಮ ಆಫೀಸಿನ ಕೆಲಸಗಳಾಗಲಿ, ಅಥವಾ ಪರ್ಸನಲ್ ಕೆಲಸಗಳಾಗಲಿ, ಒಳ್ಳೆಯ ಕೆಲಸ ಇದ್ದಾಗ ಆಲಸ್ಯ ಮಾಡದೆ, ನಾಳೆಗೆ  ಮುಂದೂಡದೆ ಇಂದೇ ಅದನ್ನು ಮಾಡಿ ಮುಗಿಸಿಬಿಡಬೇಕು. ಹಾಗೆಯೇ ಯಾವುದಾದರೂ ಕೆಟ್ಟ ಕೆಲಸ, ಅಥವಾ ಅಪಾಯ ತಂದೊಡ್ಡುವ ಕೆಲಸವಿದ್ದಾಗ ಅದನ್ನು ಆದಷ್ಟೂ ಮುಂದೂಡಬೇಕು; ಮುಂದೂಡುತ್ತಲೇ ಇರಬೇಕು. 

ಎರಡನೆಯದಾಗಿ ಈ ಕತೆಯಿಂದ ನಾವು ಗಮನಿಸಬೇಕಾದದ್ದು - ಯಾರೋ ಒಬ್ಬರು ಮರಣಹೊಂದಿದಾಗ  ನಾವು ಕೆಲವೊಮ್ಮೆ ಸೋಶಿಯಲ್ ಮೀಡಿಯಾಗಳಲ್ಲಿ ಅವರ ಬಗ್ಗೆ ಬಹಳ ಕೀಳಾಗಿ ಬರೆಯುತ್ತಿರುತ್ತೇವೆ. ಒಬ್ಬ ವ್ಯಕ್ತಿ ಸಾಯುತ್ತಲೇ ಅವನ ಜೊತೆ ನಮ್ಮ ಶತ್ರುತ್ವ ಕೂಡ ಸಾಯಬೇಕು. ಆದಷ್ಟೂ ಶತ್ರುವಿನ ಬಗ್ಗೆ ಕೂಡ ಒಳ್ಳೆಯ ಮಾತುಗಳನ್ನು ಆಡಬೇಕು. 

ಈ ಎರಡು ತತ್ವಗಳನ್ನೂ ನಾವು ಪಾಲಿಸಿದ್ದೇ ಆದರೆ ನಮ್ಮ ಬಹುತೇಕ ಸಮಸ್ಯೆಗಳು, ಕೆಲಸದ ಒತ್ತಡಗಳು, ಆಫೀಸಿನಲ್ಲಿ ಬೇಡದ ಬೈಗುಳಗಳು, ಸೋಶಿಯಲ್ ಮೀಡಿಯಾದಲ್ಲಿ ಕೆಲಸಕ್ಕೆ ಬಾರದ ಜಗಳಗಳು, ಕಮೆಂಟಿನ ಯುದ್ಧಗಳು ಇಂತಹ ಕೆಲಸಕ್ಕೆ ಬಾರದ ಟೆನ್ಷನ್ ಗಳೆಲ್ಲಾ ಬಹುತೇಕ ನಿಂತೇ ಹೋಗುತ್ತದೆ. ಏನಂತೀರಿ?


No comments:

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...